ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿವಿಯಲ್ಲಿ ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಧಾರ್ಮಿಕ ಸಾಮರಸ್ಯ ಬಿಂಬಿಸಿದವರು ಶಿವಾಜಿ – ಪ್ರೊ.ಶಿವಾನಂದ ಕೆಳಗಿನಮನಿ

ಶಿವಾಜಿ ಭಾರತದ ಅಪ್ರತಿಮ ವೀರ ಸೇನಾನಿ, ಹಿಂದೂ ಧರ್ಮವನ್ನು ರಕ್ಷಣೆ ಮಾಡಿದ ಮಹಾನ್ ಹೋರಾಟಗಾರ, ಹಿಂದೂ ಧರ್ಮಕ್ಕೆ ಛತ್ರಪತಿ ಶಿವಾಜಿಯವರ ಕೊಡುಗೆ ಅಪಾರವಾಗಿದ್ದು ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಶಿವಾನಂದ ಕೆಳಗಿನಮನಿ ಅವರು ಹೇಳಿದರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲ್‌ನಲ್ಲಿ ಛತ್ರಪತಿ ಶಿವಾಜಿಯವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿ ಮಾತನಾಡಿದ ಅವರು, ಮಾನವತಾವಾದಿಯಾಗಿದ್ದ ಶಿವಾಜಿ ಮಹಿಳೆಯರಿಗೆ ವಿಶೇಷ ಗೌರವ ನೀಡುತ್ತಿದ್ದರು. ವಿಶಿಷ್ಠ ಯುದ್ಧ ತಂತ್ರ ನೌಕಾಪಡೆಯ ನಿರ್ಮಾಣ, ಕೋಟೆಗಳ ನಿರ್ವಹಣೆ, ಮರಾಠಿ ಭಾಷೆಯ ಪ್ರೋತ್ಸಾಹ ಮತ್ತು ಸುಸಜ್ಜಿತ ಆಡಳಿತಾತ್ಮಕ ವ್ಯವಸ್ಥೆಗಳಂತಹ ಆವಿಷ್ಕಾರಗಳ ಮೂಲಕ ಬಲಿಷ್ಠ ಹಿಂದೂ ಸ್ವರಾಜ್ಯವನ್ನು ಸ್ಥಾಪಿಸಿದರು. ಶಿವಾಜಿ ಮಹಾರಾಜರು ಮತ್ತು ಕರ್ನಾಟಕದ ಬಾಂಧವ್ಯ ಐತಿಹಾಸಿಕವಾಗಿ ಕೌಟುಂಬಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಆಳವಾಗಿದೆ. ಕನ್ನಡ ಭಾಗದ ಜನರಿಂದ ಬೆಂಬಲ ಮತ್ತು ದಕ್ಷಿಣ ದಂಡೆಯಾತ್ರೆಯ ಮೂಲಕ ಕನ್ನಡ ನಾಡು ನುಡಿಗಳೊಂದಿಗೆ ಶಿವಾಜಿ ವಿಶಿಷ್ಠ ಬಾಂಧವ್ಯ ಹೊಂದಿದ್ದರು. ತಮ್ಮ ಆಡಳಿತಾವಧಿಯಲ್ಲಿ ಮರಾಠಿ ಭಾಷೆಯನ್ನು ಬರೆಯಲು ವ್ಯಾಪಕವಾಗಿ ಬಳಸುತ್ತಿದ್ದ ಭಾಷಾ ಲಿಪಿಯು ಮೋಡಿ ಲಿಪಿಯಾಗಿತ್ತು. ಶಿವಾಜಿ ಹೊಂದಿದ ಮಾನವೀಯತಾ ಮೌಲ್ಯಗಳು, ಸಾಂಸ್ಕೃತಿಕ ಹಿರಿಮೆಗಳು, ಹಿಂದೂ ಧರ್ಮದ ರಕ್ಷಣೆಯ ನೈತಿಕತೆಗಳು ಮತ್ತು ನಿಲುವು ಕೂಡ ಆದರ್ಶಪ್ರಾಯಾವಾಗಿವೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ.ಎ.ಚನ್ನಪ್ಪ ಕೆ.ಎ.ಎಸ್., ಡೀನರಾದ ಡಾ.ಲತಾ ಎಂ.ಎಸ್., ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪಕುಲಸಚಿವರಾದ ಡಾ.ಕೆ.ವೆಂಕಟೇಶ ಸ್ವಾಗತಿಸಿ ವಂದಿಸಿದರು.